Wednesday, February 27, 2013

ದಕ್ಷ ಯಜ್ಞ

" ರೀ ಗೊತ್ತಾಯ್ತ?" 
 ಬೆಳಗಿನ ತಿಂಡಿ ಮುಗಿಸಿ ಆ ದಿನದ ಸುದ್ದಿಪತ್ರಿಕೆ  ಹಿಡಿದು ಕುಳಿತಿದ್ದ ನಾನು ಏನು ಎಂದು ಕೇಳಲಿಲ್ಲ. ಏನೋ ಹೇಳುವುದಕ್ಕೆ ಅದು ಪೀಠಿಕೆ ಎಂದು ಗೊತ್ತು. ನಿವೃತ್ತನಾಗಿ ಎರಡು ವರ್ಷಗಳಾಗಿ ದೇಹಕ್ಕು, ಮನಸಿಗು ಒಂದು ರೀತಿಯ ಜಡತ್ವ ಅಭ್ಯಾಸವಾಗಿತ್ತು. ಪುನಃ ನನ್ನವಳೆ ಮುಂದುವರೆಸಿದಳು "ಮಧು ಊರಿಗೆ ಬಂದಿದ್ದಾನೆ". ಮಧು ಅಂದರೆ ಮಧುಸೂದನ, ನನ್ನ ಚಿಕ್ಕಮ್ಮನ ಮಗ ಶ್ರೀನಿವಾಸನ ಮೊದಲನೆ ಮಗ. ಶ್ರೀನಿವಾಸ ಹಾಗು ಅವನ ಹೆಂಡತಿ ವನಜ ನಮ್ಮ ಮನೆಯ ಹತ್ತಿರವೆ ಇದ್ದವರು. ಅವರಿಗೆ ಇಬ್ಬರು ಮಕ್ಕಳು ಮಧುಸೂದನ ಮತ್ತು ಕೇಶವ. ಹೀಗೆ ಇಪ್ಪತ್ತು ವರ್ಷಗಳ ಹಿಂದೆ ಶ್ರೀನಿವಾಸ ಕಾಶಿಗೆ ಎಂದು ಹೋದವನು ಹಾಗೆ ಮಾಯವಾಗಿಬಿಟ್ಟ. ಅವನು ಎಲ್ಲಿ ಹೋದ ಎಂಬುದೆ ತಿಳಿಯಲಿಲ್ಲ. ಪೋಲಿಸ ಮುಂತಾದ ಎಲ್ಲ ಮಾರ್ಗವು ಮುಗಿಯಿತು ಅವನು ಬದುಕಿದ್ದಾನೋ ಇಲ್ಲವೋ ಎಂಬ ಸುಳಿವು ಸಿಗದೆ ಕಡೆಗೆ ಎಲ್ಲ ಸುಮ್ಮನಾದರು. ವನಜ ಕೆಲಸಕ್ಕೆ ಸೇರಿದಳು. ಗಂಡ ಬಿಟ್ಟು ಹೋದ ಹಣವು ಸೇರಿ ಹೇಗೊ ಮಕ್ಕಳನ್ನು ಓದಿಸಿದಳು. ಅವಳಿಗೆ ಹಾಗು ಮಕ್ಕಳಿಗೆ ಪ್ರತಿ ಸಣ್ಣವಿಷಯಕ್ಕು ನನ್ನ ಬಳಿ ಬರುವುದು ಅಬ್ಯಾಸ. ನನಗು ಅಷ್ಟೆ ಶ್ರೀನಿವಾಸನ ಜೊತೆಯ ಸ್ನೇಹಕ್ಕೊ , ಹುಡುಗರ ಮೇಲಿನ ಕರುಣೆಗೊ ಅವರಿಗೆ ಸದಾ ಸಹಾಯ ಮಾಡುವಾಗ ಬೇಸರ ಅನ್ನಿಸುತ್ತಿರಲಿಲ್ಲ. ವನಜ ಹಾಗು ಇಬ್ಬರು ಹುಡುಗರು ಮಧು ಹಾಗು ಕೇಶವ ನನ್ನನು ಚಿಕ್ಕಪ್ಪ ಎಂದೆ ಕರೆಯುತ್ತಿದ್ದರು. 
      ಐದು ವರ್ಷಗಳ ಹಿಂದೆ ಮನೆಗೆ ಬಂದಿದ್ದ ವನಜ ಏಕೊ ಬೇಸರ ಮಾಡಿಕೊಂಡಿದ್ದಳು. ಮಧುವಿನ ಬಗ್ಗೆ ಅವಳಿಗೆ ಚಿಂತೆಯಾಗಿತ್ತು.     ಕಂಪ್ಯೂಟರನಲ್ಲಿ ಬಿ.ಇ. ಮುಗಿಸಿ ಮನೆಯಲಿದ್ದ ಮಧುವಿನ ವರ್ತನೆ ಅವಳಿಗೆ ಸಮಸ್ಯೆಯಾಗಿತ್ತು. ಸದಾ ಸೋಮಾರಿಯಂತೆ ಮಲಗಿರುವುದು, ಇಲ್ಲ ಸ್ನೇಹಿತರು ಬಂದರೆ ಅವರೋಡನೆ ತಿರುಗಾಡಲು ಹೋದರೆ ಸರಿರಾತ್ರಿಯಾದರು ಬರುತ್ತಿರಲಿಲ್ಲ. ಅವನ ವರ್ತನೆ, ಸಹವಾಸಗಳು ಯಾವುದು ಸರಿಇರಲಿಲ್ಲ. ಹಾಗಂತ ಅಪ್ಪನ ನೆರಳಿಲ್ಲದೆ ಬೆಳೆದ ಒರಟು ಮಗನನ್ನು ತಿದ್ದುವ ಶಕ್ತಿಯು ಅವಳಿಗೆ ಇರಲಿಲ್ಲ. 
     ಅದೇ ಸಮಯಕ್ಕೆ ನನ್ನ ಪರಿಚಯದವರ ಮೂಲಕ, ಅಮೇರಿಕದ ಸಾಫ್ಟವೇರ್      ಕಂಪನಿಯೊಂದರ ಹುದ್ದೆಗಾಗಿ ಮಧುವಿನ ದಾಖಲೆಗಳು ಹಾಗು ಅಪ್ಲಿಕೇಶನ್ ಕಳಿಸಿದ್ದು,    ಅವನಿಗೆ ಇಂಟರವ್ಯೂಗಾಗಿ ಕರೆ ಬಂದಿತು. ಹೇಗೊ ಅವನ ಆಯ್ಕೆಯು ಆಗಿಹೋಗಿತ್ತು. ನಾನು ರಜಾಹಾಕಿ ಅವನ ಜೊತೆ ಓಡಾಡಬೇಕಾಯಿತು. ಆಸಮಯದಲ್ಲಿ ಅವನು ತನ್ನ ಸೋಮಾರಿತನ, ಬಿಡುಬೀಸು ಸ್ವಬಾವದಿಂದಾಗಿ ನನ್ನ ಸಹನೆಯನ್ನೆ ಕೆಣಕುತ್ತಿದ್ದ. ಅವನ ದಾಖಲೆಗಳಿಗೆ ಸರ್ಕಾರಿ ಅಧಿಕಾರಿಗಳಿಂದ ಪ್ರಮಾಣಪತ್ರ ಬೇಕಾದಾಗ, ನಾನು ನನ್ನ ಬಾಸ್‌ಗೆ ಹೇಳಿದ್ದೆ, ಸಂಜೆ ಬರುತ್ತೇನೆ ಎಂದ ಇವನು ಬಂದಿದ್ದು ಸಾಯಂಕಾಲ ಆರು ಘಂಟೆಯ ನಂತರ. ಇವನ ದಾಖಲೆಗಳಿಗೆ ಸಹಿಮಾಡಲು ಇವನಿಗಾಗಿ ನಮ್ಮ ಮೇಲಾಧಿಕಾರಿ ಒಂದು ಗಂಟೆಗು ಅಧಿಕ ಕಾಯುವ ಪ್ರಮೇಯ ಬಂತು. 
     ಹೇಗೊ ಅವನು ವಿದೇಶಕ್ಕೆ ಹೊರಟ. ನಂತರ ಅವನು ಒಂದು ಸಾರಿ ಮಾತ್ರ   ಟೆಲಿಫೋನ ಮಾಡಿದ್ದ. ಪ್ರಾರಂಬದಲ್ಲಿ ಅವನ ಬಗ್ಗೆ ಬಂದು ತಿಳಿಸುತ್ತಿದ್ದ ವನಜ ನಂತರ   ನಿಲ್ಲಿಸಿದಳು. ಈಗ ಅವರ ಮನೆಯ ಸ್ಥಿಥಿಯು ಬದಲಾಗಿತ್ತು.ಅವನ ವಿದೇಶಿ ಹಣದಿಂದ ಹೊಸಮನೆ, ಕಾರು ಎಲ್ಲ ಬಂದಿದ್ದವು. ಈಗ ನನ್ನ ಸಹಾಯದ ಅಗತ್ಯವು ಅವರಿಗೆ ಇರಲಿಲ್ಲ. ಅವನು ಊರಿಗೆ ಬಂದು ಮೂರು ದಿನ ಕಳೆದಿದ್ದು ನನಗೆ ತಿಳಿದಿತ್ತು. ಮಧು ನಮ್ಮ ಮನೆಗೆ ಬರಬಹುದೆಂದು ತಿಳಿದಿದ್ದೆ ಹಾಗಾಗಿ ಸುಮ್ಮನಿದ್ದೆ.
    ನನ್ನ ಮೌನದಿಂದ ವಿಚಲಿತಳಾಗದ ಅವಳು "ಇವತ್ತು ಹೋಗಿ ಅವನನ್ನು ನೋಡಿ ಬರೋಣ್ವ?" ಎಂದು ಕೇಳಿದಳು. ಏಕೋ ನನ್ನ ಒಳಮನಸಿಗೆ ಅಲ್ಲಿ ಹೋಗುವುದು ಬೇಕಿರಲಿಲ್ಲ ಆದರೆ ಹೋಗಿ ಅವನನ್ನು ಮಾತನಾಡಿಸಿಬರಬೇಕೆಂಬ ಅತುರವು ಇತ್ತು. ಹೀಗಾಗಿ ಅವಳಿಗೆ "ನೀನು ಬೇಡ. ಈಗ ನಾನು ಹೋಗಿಬರುತ್ತೇನೆ, ನೀನು ನಾಳೆ, ನಾಡಿದ್ದು ಹೋಗೋದ ಅಥವ ಅವನೆ ಇಲ್ಲಿ ಬರುತ್ತಾನ ಆಮೇಲೆ ನೋಡೋಣ" ಎಂದೆ. ನನ್ನನ್ನು ಒಂದು ರೀತಿ ನೋಡಿದ ಅವಳು  ಏನು ಮಾತನಾಡದೆ ಒಳಗೆ ಹೊರಟುಹೋದಳು.
   ಮಧುವಿನ ಮನೆ ತಲುಪಿದಾಗ ಆಗಲೆ ಬಿಸಿಲು ನೆತ್ತಿಗೇರುತಿತ್ತು. ಹೊರಗೆ ನಿಂತ ಕಾರು ಅವನು ಒಳಗೆ ಇರುವದನ್ನು ಹೇಳಿತು. ಭವ್ಯವಾಗಿ ನಿಂತ ಮನೆ ವೈಭವವನ್ನು ಸಾರುತಿತ್ತು. ಬಾಗಿಲು ತಟ್ಟಿದೆ, ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆಯಿತು. ವನಜ ನನ್ನನು ನೋಡಿ ನಗುತ್ತ "ಕಾಲಿಂಗ್ ಬೆಲ್ ಮಾಡದೆ ಬಾಗಿಲು ತಟ್ಟಿದಾಗಲೆ ನೀವೆ ಅಂದುಕೊಂಡೆ ಒಳಗೆ ಬನ್ನಿ ಎನ್ನುತ್ತ ಒಳಗೆ ಹೊರಟಳು. ನಾನು ಹಿಂಬಾಲಿಸಿದೆ, ಇವಳು ಚಿಕ್ಕವಳು ಆಗಲೆ ನಮ್ಮಂತೆ    ಹಿರಿಯ ವಯಸಿನವಳಂತೆ ಕಾಣುತ್ತಾಳೆ, ಸಂಸಾರದ ಬಾರ ಅಂದುಕೊಂಡೆ. ಒಳಗೆ ಹೋಗಿ  ಹಾಲಿನಲ್ಲಿದ್ದ ಸೋಫದಲ್ಲಿ ಕುಳಿತೆ. ವನಜ ನೀರು ತರುತ್ತ  "ತುಂಬಾ ಬಿಸಿಲು ಹೇಗೆ ಬಂದಿರಿ?"  ಅನ್ನುತ್ತ ನೀರು ಕೊಟ್ಟಳು. ತಣ್ಣನೆಯ ನೀರು ಕುಡಿಯುತ್ತಿರುವಾಗಲೆ ವನಜ "ತುಂಬ ದಿನ ಅಯ್ತಲ್ವ ನೀವು ಬಂದು" ಎಂದಳು. ಹಾಲಿನಲ್ಲಿಯೆ ಟೀವಿ ನೋಡುತ್ತ ಕುಳಿತ್ತಿದ್ದ ಕೇಶವ    ನನ್ನತ್ತ ತಿರುಗಿಯು ನೋಡಲಿಲ್ಲ. ನಾನಗಿಯೆ "ಕೇಶವ ಈಗ ಏನು ಮಾಡ್ತಿದೀಯ ನಿನ್ನ ಓದು ಮುಗಿದಿರಬೇಕಲ್ವ?" ಎಂದೆ. ಅವನು ಟೀವಿ ಆರಿಸಿ ನನ್ನ ಕಡೆ ನೋಡಿದ, 
    ವನಜ "ಅವನ ಓದು ಮುಗೀತು ಚಿಕ್ಕಪ್ಪ, ಮಧು ಇವನನ್ನು ಅಲ್ಲಿಗೆ ಬಾ, ಅನ್ನುತ್ತಿದಾನೆ, ಇವನು ಹೊರಟು ಒಂದೆ ಕಾಲಲ್ಲಿ ನಿಂತಿದಾನೆ" ಅಂದಳು. ಕೇಶವ ಏನು ಮಾತನಾಡದೆ ನನ್ನ ಕಡೆ ತಿರುಗಿಯು ನೋಡದೆ ಎದ್ದು, ನಿದಾನವಾಗಿ ಮನೆಯ ಒಳಗೆ ಇದ್ದ ಮೆಟ್ಟಲು ಹತ್ತುತ್ತ ಮೇಲಿನ ಬಾಗಕ್ಕೆ ಹೊರಟು ಹೋದ. ಏಕೊ ವನಜಳಿಗೆ ಈಗ ಮಕ್ಕಳ ಚಿಂತೆಗಿಂತ, ತನ್ನ ಇಳಿವಯಸಿನ, ತನ್ನ ಜೀವನದ ಯೋಚನೆಯೆ ಅಧಿಕ ಅನ್ನಿಸಿತು. 
   ಪುನ: ನಾನಾಗಿಯೆ "ಮಧು ಎಲ್ಲಿ ವನಜ ಅವನನ್ನು ಮಾತನಾಡಿಸಿ ಹೋಗೋಣ ಅಂತಲೆ ಬಂದೆ , ಅವನು ಮನೆ ಕಡೆ ಏನಾದರು ಬರ್ತಾನ? ಮನೆಯಲ್ಲಿ ಅವಳು ಸಹ ಮಧುವನ್ನು ನೋಡಬೇಕು ಅಂತ ಕುಣಿತಿದ್ಲು" ಅಂದೆ. ಏಕೋ ವನಜಳ ಮುಖದಲ್ಲಿ ಸುಖ, ಸಂತೋಷವಲ್ಲದ  ಭಾವಗಳು ಹಾದು ಹೋದವು. "ಇರಿ ಚಿಕ್ಕಪ್ಪ, ಮೇಲೆ ಇದ್ದಾನೆ ನಾನೆ ಹೋಗಿ ಕರೆಯುತ್ತೀನಿ" ಎಂದು ಮೆಟ್ಟಿಲುಗಳನ್ನು ಹತ್ತುತ್ತ ಮೇಲೆ ಹೋದಳು. ಎಲ್ಲೊ  ಸಣ್ಣದ್ವನಿಯಲ್ಲಿ      ಮಾತನಾಡುತ್ತಿರುವ ಶಬ್ದ. ನಂತರ ಕೆಳಗೆ ಬಂದ ವನಜ "ಬರ್ತಿದಾನೆ ಚಿಕ್ಕಪ್ಪ ಒಂದು ನಿಮಿಷ"  ಅನ್ನುವಾಗ, ಅವಳ ದ್ವನಿಯೇಕೊ ಒಡಕು ಅನ್ನಿಸಿ ಎಲ್ಲವು ಸರಿಯಲ್ಲ, ಸಹಜವಾಗಿಲ್ಲ ಅಥವ  ನನ್ನ ಭ್ರಮೆಯೋ ಎಂದು ಸುಮ್ಮನಾದೆ. 
     ಮಧು ಕೆಳಗಿಳಿದು ಬಂದ, ನೋಡುವಾಗ ಮೊದಲಿಗಿಂತ ಕೆಂಪಗೆ, ದಪ್ಪಗೆ ಆಗಿದ್ದಾನೆ ಅನ್ನಿಸಿತು. ಎದುರಿಗೆ ಬಂದು ಕುಳಿತವನ ಕಣ್ಣುಗಳು ಕೆಂಪು ಕೆಂಪು, ಮಹಡಿಮೇಲೆ ಏನು ಮಾಡುತ್ತಿದ್ದ, ಕುಡಿಯುತ್ತಿದ್ದನ? ಛೇ ಛೇ, ಅವನು ಸುಮ್ಮನೆ ಕುಳಿತಾಗ ನಾನಾಗೆ ಮಾತನಾಡಿದೆ "ಹೇಗಿದ್ದೀಯ ಮಧು, ನಿನ್ನ ಮಾತನಾಡಿಸೋಣ ಅಂತ ಬಂದೆ,ನೀನು ಏನೊ ಕೆಲಸದಲ್ಲಿದ್ದೀಯ ಅನ್ನಿಸುತ್ತೆ" 
   "ಹ್ಹ, ಚಿಕ್ಕಪ್ಪ,  ನೀವು ಏನು ಈಗ ರಿಟೈರ್ಡ ಅನ್ನಿಸುತ್ತೆ. ಅದಕ್ಕೆ ಈ ಬಿಸಿಲಿನಲ್ಲು ಬಂದು ಬಿಟ್ಟಿದೀರಿ?" ಅಂದ. ಮಾತಿನ ಪ್ರಾರಂಬವೆ ಸರಿಹೋಗಲಿಲ್ಲ ಅನ್ನಿಸಿತು. ಆದರು "ಬಿಸಿಲು ಏನು ಮಾಡುತ್ತೆ, ಹಾಗಂತ ಮಾಡೊ ಕೆಲಸಬಿಟ್ಟು ಬಿಡ್ತಾರ? , ನಿನ್ನನ್ನು ಬಂದು ನೋಡ ಬೇಕಲ್ವ ಹಾಗಾಗಿ ಬಂದೆ ನಿನಗೇನು ತೊಂದರೆ ಆಯಿತ?" ಎಂದೆ.
   "ತೊಂದರೆ ಅಂತ ಅಲ್ಲ, ಆದರು ಇಲ್ಲಿಯ ರೀತಿನೀತಿಗಳೆ ನನಗೆ ಹಿಡಿಸಲ್ಲ , ಈಗ ಅಮೇರಿಕದಲ್ಲಿ ನೋಡಿ, ಟಲಿಫೋನ್ ಮಾಡಿ ಅವರ ಸಮಯ ತಿಳಿದುಕೊಂಡೆ ಒಬ್ಬರು     ಇನ್ನೊಬ್ಬರ ಮನೆಗೆ ಹೋಗ್ತಾರೆ, ಸಾಮನ್ಯವಾಗಿ ಮನೆಗಳಲ್ಲಿ ಒಬ್ಬರನ್ನೊಬ್ಬರು ಬೇಟಿ ಮಾಡೋದು ಕಡಿಮೆ. ಇಲ್ಲಿ ಆರೀತಿಯ ನಾಗರೀಕತೆಯನ್ನು ನಿರೀಕ್ಷೆ ಮಾಡಕ್ಕಾಗಲ್ಲ" ಅಂದ. ಏನು ಹರಿತವಾಗಿ ಮಾತನಾಡುತ್ತಿದ್ದಾನೆ, ಇದೆ ಮಧು ತನ್ನ ಕೆಲಸಗಳಿಗಾಗಿ ರಾತ್ರಿ ಹತ್ತು ಹನ್ನೊಂದು ಗಂಟೆಗೆಲ್ಲ ನಮ್ಮ ಮನೆಯ ಬಾಗಿಲು ತಟ್ಟುತ್ತಿದ್ದ ಅಂತ ನೆನಪಾಗಿ ಮನಸಿಗೆ ಕಸಿವಿಸಿಯಾಯಿತು. ಪುನಃ ನಾನೆ "ಏನು ಮಾಡೋದು ಹೇಳಪ್ಪ, ಇದು ಇಲ್ಲಿಯ ರೀತಿನೀತಿ, ನಮ್ಮ ನಾಗರೀಕತೆ ನಮ್ಮ ನೆಲದ ಸಂಪ್ರದಾಯಗಳಿಗೆ ನಾವು ಇಲ್ಲಿದ್ದಾಗ  ಬೆಲೆ ಕೊಡಬೇಕು. ಅಲ್ವಾ?" ಎಂದೆ.
    "ಏನು ರೀತಿನೀತಿ, ಸಂಪ್ರದಾಯ ಎಲ್ಲ ಹಿಪೋಕ್ರಸಿ, ಸದಾ ನೀತಿ,ಧರ್ಮದ ಬಗ್ಗೆ ಕೊರೆಯುವ ಇಲ್ಲಿ ಇರುವಷ್ಟು ಮೌಡ್ಯ, ಭ್ರಷ್ಟಾಚಾರ ಯಾವ ದೇಶದಲ್ಲಿಯು ಇಲ್ಲ. ಇಲ್ಲಿ ಏನು ಸಾದಿಸಿದ್ದಾರೆ ಹೇಳಿ , ಒಂದು ರಸ್ತೆಯ, ಕುಡಿಯಲು ನೀರು, ಉತ್ತಮ ವ್ಯವಸ್ಥೆ ಯಾವುದು ಇಲ್ಲ. ಇರುವುದೆಲ್ಲ ಬರಿ ಬೊಗಳೆ. ಅಲ್ಲಿ ಬಂದು ನೋಡಿ, ಅಲ್ಲಿಯ ರಸ್ತೆಗಳು, ನಗರಗಳು, ನಾಗರೀಕತೆ ಎಲ್ಲ ನೋಡಿ ಇಲ್ಲಿಯ ಜನ ಕಲಿಯಬೇಕು" ಅಂದ. 
     ನಾವು ಅವರಿಂದ ಕಲಿಯಬೇಕ? ನಮ್ಮ ಸಂಸ್ಕೃತಿ ಅವರಿಗಿಂತ ಎಷ್ಟೊ ಸಾವಿರ ವರ್ಷಗಳಷ್ಟು ಹಳೆಯದು, ನಾವು ನಗರಗಳನ್ನು ಕಟ್ಟುತ್ತಿದಾಗ ಅವರಿನ್ನು ಕಾಡು ಜನರಂತೆ ಬದುಕುತ್ತಿದ್ದರು, ಅವರಿಂದ ನಾವು ನಾಗರೀಕತೆ ಕಲಿಯಬೇಕ ಅನ್ನಿಸಿತು. ಮತ್ತೆ ಮಧುವಿಗೆ ಕೇಳಬೇಕೆನಿಸಿತು, ಅವನು ವಿಮಾನನಿಲ್ದಾಣದಿಂದ ಮನೆವರೆಗು ಬಂದ ನುಣ್ಣನೆಯ ರಸ್ತೆ, ನೂರಾರು ಕಿಲೋಮೀಟರ ದೂರದಿಂದ ತಂದಿರುವ ಅವನು ಕುಡಿಯುತ್ತಿರುವ ಕಾವೇರಿ ನೀರು, ಅವನು ತಣ್ಣಗೆ ಕುಳಿತಿರುವ ಏರಕಂಡಿಶನರಗೆ ಬೇಕಾದ ವಿಧ್ಯುತಶಕ್ತಿ ಇವೆಲ್ಲ ನಮ್ಮ ಸಾದನೆಗಳೆ ಅಲ್ಲವ?. ಅಷ್ಟೇಕೆ ಮಧುವಿಗೆ ಶಿಕ್ಷಣ,ನಾಗರೀಕತೆ ಕಲಿಸಿ ಅವನನ್ನು ವಿದೇಶಕ್ಕೆ ಕಳಿಸಿರುವುದು ನಮ್ಮ ಸರ್ಕಾರ,ನಮ್ಮ ಜನರ ಹಣವೆ ಅಲ್ಲವ. ಆದರೆ ಇವನ ಕೈಲಿ ವಾದಮಾಡುವದರಲ್ಲಿ ಏನು ಉಪಯೋಗವಿಲ್ಲ ಅನ್ನಿಸಿತು.
   ಅವನು ಮುಂದುವರೆಸಿದ " ಜೊತೆಗೆ ಚಿಕ್ಕಪ್ಪ, ಇಲ್ಲಿಯ ಜನ ಸಾಕಷ್ಟು ಸೋಮಾರಿಗಳು, ಸರ್ಕಾರಿ ಕಛೇರಿಗಳಲ್ಲಿ ನೋಡಿ, ಸಂಜೆ ಘಂಟೆ ಐದಾದರೆ ತಮ್ಮ ಕೆಲಸ ಮುಗಿಯಿತು ಎಂಬಂತೆ ಹೊರಟುಬಿಡುತ್ತಾರೆ ಜೀವನದಲ್ಲಿ ಮುಂದೆ ಬರಬೇಕೆಂಬ ಛಲವೇ ಇಲ್ಲ. ಸದಾ ಧರ್ಮದ ಗೊಡ್ದು ಪುರಾಣ. ಈಗ ನೀವೆ ನೋಡಿ ನಿವೃತ್ತರಾದ ತಕ್ಷಣ ಜೀವನದಲ್ಲಿ ಎಲ್ಲ ಸಾದಿಸಿಬಿಟ್ಟೆ ಏನು ಉಳಿದಿಲ್ಲ ಎಂಬಂತೆ ವಿಶ್ರಾಂತಿ ಪಡೆಯುತ್ತ, ಸುಮ್ಮನೆ ಮನೆ ಮನೆ ಅಂತ ಓಡಾಡಿಕೊಂಡಿದ್ದೀರಿ. ಮನುಷ್ಯನಿಗೆ ಕೆಲಸಮಾಡುತ್ತೇನೆಂಬ ಹುರುಪು ಇರಬೇಕು ಅಲ್ವ?" 
   ಎಲಾ ಇವನ, ಕೆಲವರ್ಷಗಳ ಹಿಂದೆ ಇವನಿಗಾಗಿ ಸಂಜೆ ನಮ್ಮ ಆಫೀಸನಲ್ಲಿ ಸಾಯಂಕಾಲ ಆರು ದಾಟಿದರು ಕಾಯುತ್ತ ಕುಳಿತ್ತಿದ್ದವು ಈಗ ಹೀಗನ್ನುತ್ತಾನೆ ಅಮೇರಿಕದಲ್ಲಿದ್ದ ಇವನು ನಮ್ಮಲ್ಲಿಯ ಕಛೇರಿಗಳನ್ನು ಯಾವಾಗ ಬಂದು ನೋಡಿದ, ನಿವೃತ್ತನಾದ ನಂತರ ಮನೆ ಮನೆ ಸುತ್ತುತ್ತ ಇದ್ದೀನಿ ಅಂತ ಯಾರು ಹೇಳಿದರು. ದೃಷ್ಟಿಮಾಂದ್ಯರ ಶಾಲೆ ಹಾಗು ಅನಾಥ ಮಕ್ಕಳ ಆಶ್ರಮದಲ್ಲಿ ಎರಡು ಕಡೆ ಕೆಲಸ ಮಾಡುತ್ತಿರುವದರಿಂದ ಈಗ ಮೊದಲಿಗಿಂತ ಕೆಲಸ ಹೆಚ್ಚು ಇದು ಇವನಿಗೆ ತಿಳಿಯದ. ನನಗೆ ಅವಮಾನ ಮಾಡಲೆ ಹೀಗೆ ಮಾತಾಡುತ್ತಿದ್ದಾನ ಅಥವ  ಇವನ ಸ್ವಭಾವನೆ ಈ ರೀತಿಯ ಅಂತ ಗೊಂದಲವಾಯಿತು. ಎದುರಿಗೆ ಕುಳಿತ್ತಿದ್ದ ವನಜ ಅತಂಕಗೊಂಡವಳಂತೆ "ಮಧು ನಿನ್ನನು ಮಾತನಾಡಿಸಿಹೋಗಲು ಬಂದರೆ ಈ ರೀತಿಯ ಅವರ ಕೈಲಿ ಮಾತನಾಡೋದು, ನಿನಗೆ ಅವರು ಮಾಡಿರುವ ಉಪಕಾರ ನೆನೆ, ನಾಳೆ ಬಾನುವಾರ ನೀನು ಬಂದಿರುವ ಸಂದರ್ಭಕ್ಕೆ ಒಂದು ಗಣೇಶ ಹೋಮ, ಸತ್ಯನಾರಾಯಣ ಪೂಜ ಇಡುವ ಅಂತಿದೀನಿ,  ಚಿಕ್ಕಪ್ಪನಿಗೆ ಬನ್ನಿ ಅಂತ ಕರೆ, ನೀನು ಅವರ ಮನೆಗೆ ಹೋಗಿ ಚಿಕ್ಕಮ್ಮನಿಗೂ ಕರೆದು ಬಾ" ಅಂದಳು.
    ಮಧು ಅವರಮ್ಮನ ಮುಖವನ್ನು ಒಮ್ಮೆ ಕ್ರೂರವಾಗಿ ನೋಡಿದ "ಅಮ್ಮ ನಾನಾಗಲೆ ಹೇಳಿದ್ದೀನಿ ನನಗೆ ಅದರಲ್ಲಿ ಆಸಕ್ತಿ ಇಲ್ಲ ಅಂತ, ನಾನು ಹೋಮ ಹವನ ಇದನ್ನೆಲ್ಲ ನಂಬುವದಿಲ್ಲ, ಹೋಮವಂತೆ, ಯಙ್ಞವಂತೆ ಎಲ್ಲ ನಾಟಕ. ನಿಜವಾದ 'ಯಙ್ಞವನ್ನು' ನಾನು ಮಾಡಿದ್ದೀನಿ, ನನ್ನ ಜೀವನವೆ ನಿಜವಾದ ಸಾಧನೆ. ನೀನು ಮೊದಲಿದ್ದ ಸ್ಥಿಥಿಗು ಈಗಿನದಕ್ಕು ಹೋಲಿಸಿನೋಡು,  ನೀನು ಇವರನ್ನಲ್ಲ  ನನ್ನ ಸಹಾಯವನ್ನು ನೆನೆಯಬೇಕು." ಎನ್ನುತ್ತ ಎದ್ದು ನಿಂತು, "ಚಿಕ್ಕಪ್ಪ ನಾನು ನಂತರ ಸಿಗ್ತೇನೆ, ಈಗ ಸ್ವಲ್ಪ ಕೆಲಸವಿದೆ" ಎಂದು ನುಡಿದು ಮೆಟ್ಟಲೇರುತ್ತ ಮೇಲೆ ಹೋದ. ವನಜ ಸಪ್ಪೆಯಾಗಿ ನಿಂತಳು, ನಾನು ಎದ್ದು ನಿಲ್ಲುತ್ತ "ವನಜ ನಾನು ಹೊರಡುತ್ತೇನಮ್ಮ,   ಮನೆಯಲ್ಲಿ ಅವಳು ಕಾಯುತ್ತಿರುತ್ತಾಳೆ." 
   ವನಜ ಹಿಂದೆ ಬರುತ್ತ "ಚಿಕ್ಕಪ್ಪ ಊಟಮಾಡಿ ಹೋಗಬಹುದಲ್ವ" ಎಂದಳು. ನಾನು "ಬೇಡಮ್ಮ ಮನೆಯಲ್ಲಿ ಕಾಯುತ್ತಿರುತ್ತಾಳೆ" ಎಂದೆ. ಅವಳು ಸಂಕೋಚದಿಂದ "ಚಿಕ್ಕಪ್ಪ ಬೇಜಾರು ಮಾಡಿಕೊಬೇಡಿ, ಅವನು ಮಾತಿನಲ್ಲಿ ತುಂಬಾ ಒರಟ, ನಾನು ಹೇಳಿದರು ಅವನು ಏನು ಬೆಲೆ ಕೊಡಲ್ಲ" ಎಂದಳು. 
ನಾನು "ಪರವಾಗಿಲ್ಲ ಬಿಡಮ್ಮ, ವಯಸ್ಸಾದವರಿಗೆ ದೇವರು ಅವಮಾನವನ್ನು ತಡೆಯುವ ಶಕ್ತಿಯನ್ನು ಸ್ವಲ್ಪ ಜಾಸ್ತಿಯಾಗಿಯೆ ಕೊಟ್ಟಿರುತ್ತಾನೆ, ನೀನೇನು ಕೊರಗಬೇಡ"     ಎನ್ನುತ್ತ ಮನೆಯಕಡೆ ಹೊರಟೆ.
     ಮನೆಯಲ್ಲಿ ನಾನು ಊಟಕ್ಕೆ ಬರಲ್ಲ ಎಂದು ಅಡಿಗೆ ಮಾಡಿರುತ್ತಾಳೊ ಇಲ್ಲವೋ ಅಂತ ಯೋಚಿಸಿ, ದಾರಿಯಲ್ಲಿ ಹೋಟಲಿನಲ್ಲಿ ಏನಾದರು ಕಟ್ಟಿಸಿಕೊಂಡು ಹೋಗಬೇಕು ಅಂದುಕೊಂಡು ರಸ್ತೆ ದಾಟುತ್ತಿದ್ದಾಗ ಕೆಲ ಹುಡುಗರು ಪಟಾಕಿ ಸಿಡಿಸುತ್ತಿದ್ದರು. ಮತ್ತೆ ದೀಪಾವಳಿ ಬಂತಲ್ವ, ಮುಂದಿನವಾರ ಮಗಳು  ಊರಿನಿಂದ ಬರುತ್ತಾಳೆ , ನೆನಪಿಗೆ ಬಂದು ಹುರುಪು ಜಾಸ್ತಿಯಾಯಿತು. 
    "ನಾನು ನಿಜವಾದ ಯಙ್ಞವನ್ನು ಮಾಡಿದ್ದೀನಿ ನನ್ನ ಜೀವನವೆ ಒಂದು ಸಾಧನೆ" ಅಂತ ಅನ್ನುತ್ತಿದ್ದ ಮಧುವಿನ ಮಾತುಗಳೆ    ನೆನಪಿಗೆ ಬಂತು, ಯಙ್ಞ , ಅಂದರೆ ದಕ್ಷಯಙ್ಞವೆ?, ನಿಜ ದಕ್ಷಯಙ್ಞವೆಂದರೆ ಯಾರಿಗಾದರು ಅಭಿಮಾನ ಭಂಗವಾಗಲೆ ಬೇಕೇನೊ, ಸದ್ಯ ನನ್ನವಳನ್ನು ಕರೆತರದೆ ಒಳ್ಳೆಯ ಕೆಲಸ ಮಾಡಿದೆ, ಅವಳಿಗೆ ಇದನ್ನೆಲ್ಲ ಸಹಿಸುವ ಶಕ್ತಿಯಿಲ್ಲ ಅನ್ನಿಸುವಾಗ ಮತ್ತೊಂದು ಅಸಂಗತ ಯೋಚನೆ ಬಂದಿತು, ಅಲ್ಲ ಶಿವನು ದಕ್ಷಯಙ್ಞಕ್ಕೆ ಪಾರ್ವತಿಯನ್ನು ಏಕೆ ಕಳಿಸಿದ, ಅವಳ ಬದಲು ಅವಳನ್ನು ತಡೆದು ತಾನೆ ಹೋಗಿಬರಬಹುದಿತ್ತು ಅನ್ನಿಸಿತು, 
------------------------------------------------------------------------------------------------------------------------------------

ಕಡೆಯಮಾತು : ಭಾರತದ ನೆಲದಲ್ಲಿಯೆ ಹುಟ್ಟಿ, ಬೆಳೆದು. ನಮ್ಮ ಸೌಕರ್ಯಗಳನ್ನು ಪಡೆದು ಡಿಗ್ರಿ ಮುಗಿಸಿ, ನಂತರ ವಿದೇಶ ಸೇರಿ ಹೆತ್ತವರನ್ನು , ತಾಯುನಾಡನ್ನು ಹೀಗೆಳೆಯುತ್ತ ತಾವು ಇರುವ ವಿದೇಶವನ್ನು ಪ್ರತಿ ಮಾತಿಗು ಹೊಗಳುತ್ತ ಇರುವ ಕೆಲವು 'ವಿದೇಶಿ' ಭಾರತೀಯರ ಮಾತುಗಳನ್ನು , ಅಥವ ಎಂದು ವಿದೇಶವನ್ನು ನೋಡದಿದ್ದರು ಪ್ರತಿಮಾತಿಗು ಭಾರತವನ್ನು ಹೊರದೇಶದೊಂದಿಗೆ ಹೋಲಿಕೆ ಮಾಡುತ್ತ ನಮ್ಮನ್ನೆ ಕೀಳಿರಿಮೆಯಿಂದ ಕಾಣುವ ಭಾರತೀಯ 'ವಿದೇಶಿ'ಯರನ್ನು ಮಾತುಗಳನ್ನು ಕೇಳುವಾಗ ಈ ಕತೆ ಬರೆಯಬೇಕೆನಿಸಿತು. ಯಾರೊಬ್ಬರ ಮನ ಬೇಸರಪಡಿಸಲು ಅಲ್ಲ 

No comments:

Post a Comment

enter your comments please